Karnataka logo

Karnataka Tourism
GO UP

ಹಾವೇರಿ

separator
ಕೆಳಗೆ ಸ್ಕ್ರಾಲ್ ಮಾಡಿ

.

ಹಾವೇರಿ ಜಿಲ್ಲೆಯು ಬಹುತೇಕ ಕರ್ನಾಟಕದ ಮಧ್ಯಭಾಗದಲ್ಲಿದೆ,  ಉತ್ತರದ ಬೀದರ್‌ನಿಂದ ಮತ್ತು ದಕ್ಷಿಣದ ಚಾಮರಾಜನಗರದಿಂದ ಸಮಾನ ಅಂತರದಲ್ಲಿದೆ. ಇದರ ಸುತ್ತಲೂ ಉತ್ತರದಲ್ಲಿ ಧಾರವಾಡ ಮತ್ತು ಗದಗ, ಪೂರ್ವದಲ್ಲಿ ಬಳ್ಳಾರಿ ಮತ್ತು ದಾವಣಗರೆ, ದಕ್ಷಿಣದಲ್ಲಿ ಶಿವಮೊಗ್ಗ ಮತ್ತು ಪಶ್ಚಿಮದಲ್ಲಿ ಉತ್ತರ ಕನ್ನಡ ಇವೆ. ಹಾವೇರಿ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಗೆ ಹೆಸರುವಾಸಿಯಾಗಿದೆ ಮತ್ತು ಇದನ್ನು ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಪರಿಗಣಿಸಲಾಗಿದೆ.

ಹಾವೇರಿಯು ಸಂತ ಶಿಶುನಾಳ ಷರೀಫ್, ಕನಕದಾಸ ಮತ್ತು ಸರ್ವಜ್ಞರಂತಹ ಹಲವಾರು ಪ್ರಮುಖ ವ್ಯಕ್ತಿಗಳ ಜನ್ಮಸ್ಥಳವಾಗಿದೆ. ಹಾವೇರಿಯು ಹಲವಾರು ಪ್ರಸಿದ್ಧ ಬರಹಗಾರರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೃ. ಗೋಕಾಕ್, ಸ್ವಾತಂತ್ರ್ಯ ಹೋರಾಟಗಾರರಾದ ಗುದ್ಲಪ್ಪ ಹಳ್ಳಿಕೇರಿ ಮುಂತಾದವರ ತವರೂರಾಗಿದೆ. ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ ಮತ್ತು ಬಂಕಾಪುರ ನವಿಲು ಅಭಯಾರಣ್ಯದಂತಹ ವನ್ಯಜೀವಿ ಆಕರ್ಷಣೆಗಳಿಗೆ ಹಾವೇರಿ ಹೆಸರುವಾಸಿಯಾಗಿದೆ. ಬ್ಯಾಡಗಿಯಲ್ಲಿ ಬೆಳೆದ ಕೆಂಪು ಮೆಣಸಿನಕಾಯಿಗಳು ಅತ್ಯಂತ ಜನಪ್ರಿಯವಾಗಿವೆ ಮತ್ತು ಅವುಗಳನ್ನು ಜಿಐ(GI) ಟ್ಯಾಗ್ ಮಾಡಲಾಗಿದೆ. ಐರಾಣಿಯಲ್ಲಿ ತಯಾರಿಸಿದ ಕಂಬಳಿಗಳು ಈ ಪ್ರದೇಶದಲ್ಲಿ ಜನಪ್ರಿಯವಾಗಿವೆ.

ಹಾವೇರಿಯ ಆಹಾರ ಪದ್ಧತಿಯು ಉತ್ತರ ಕರ್ನಾಟಕದ ಹೆಚ್ಚಿನ ಅಡುಗೆ ವಿಧಾನನಗಳಿಗೆ ಹೋಲುತ್ತದೆ, ಇದರಲ್ಲಿ ಜೊಳದ ರೊಟ್ಟಿ, ಸಜ್ಜೆ ರೊಟ್ಟಿ, ಕುಚ್ಚಕಡಬು(ಒಂದು ಸಿಹಿತಿಂಡಿ) ಮತ್ತು ಹೋಳಿಗೆ ಸೇರಿವೆ ಮತ್ತು ನೀವು ಹಾವೇರಿಗೆ ಭೇಟಿ ನೀಡಿದಾಗ ಇಲ್ಲಿಯ ರುಚಿಯನ್ನು ಸವಿಯಬಹುದು.

ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಕ್ಲಿಕ್ ಮಾಡಿ

ಐತಿಹಾಸಿಕ ತಾಣಗಳು
  • ಹಾನಗಲ್: ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣವು ದೇವಾಲಯಗಳು ಮತ್ತು ಐತಿಹಾಸಿಕ ಮಹತ್ವಕ್ಕಾಗಿ ಜನಪ್ರಿಯವಾಗಿದೆ. ಹಾನಗಲ್ ಕದಂಬ ಆಡಳಿತಗಾರರ ಒಂದು ಶಾಖೆಯ ರಾಜಧಾನಿಯಾಗಿತ್ತು. ಇಲ್ಲಿ  12 ಮತ್ತು 13 ನೇ ಶತಮಾನಗಳ 200 ಕ್ಕೂ ಹೆಚ್ಚು ಶಾಸನಗಳು ಕಂಡುಬಂದಿವೆ.
  • ಐರಾಣಿ: ರಾಣೆಬೆನ್ನೂರಿನಿಂದ ಪಶ್ಚಿಮಕ್ಕೆ 24 ಕಿ.ಮೀ ದೂರದಲ್ಲಿರುವ ಐರಾಣಿಯಲ್ಲಿ ಪಾಳುಬಿದ್ದ ಕೋಟೆ, ವೀರಶೈವ ಮಠ ಇದೆ ಮತ್ತು ಸ್ಥಳೀಯವಾಗಿ ತಯಾರಿಸಿದ ಕಂಬಳಿ ದೊರೆಯುತ್ತದೆ.
  • ಸವಣೂರಿನ ದೊಡ್ಡ ಬಾವೋಬಾಬ್ ಮರಗಳು: ದೇಶದ ಮೂರು ದೊಡ್ಡ ಬಾವೋಬಾಬ್ ಮರಗಳನ್ನು ಹತ್ತಿರದಲ್ಲಿ ನೆಟ್ಟಿರುವ ಏಕೈಕ ಸ್ಥಳ ಸವಣೂರು. ಮೂರು ಅಗಾಧವಾದ, ಬಾವೋಬಾಬ್ ಮರಗಳನ್ನು ತ್ರಿಕೋನ ರಚನೆಯಲ್ಲಿ ನೆಡಲಾಗಿದೆ ಮತ್ತು ಪಟ್ಟಣದ ಹೊರವಲಯದಲ್ಲಿ ಒಟ್ಟಿಗೆ ನಿಂತಿದೆ. ವಿಪರ್ಯಾಸವೆಂದರೆ, ಬಾವೋಬಾಬ್ ಮರಗಳು ಆಫ್ರಿಕಾದ ಸ್ಥಳೀಯ ಮರವಾದ್ದರಿಂದ ಬೃಹತ್ ಮರಗಳು ಭಾರತೀಯ ನೆಲದಲ್ಲಿ ವಿಲಕ್ಷಣವಾಗಿ ಕಾಣುತ್ತವೆ. ಈ ಮರಗಳ ವಯಸ್ಸು ಮತ್ತು ಅವುಗಳು ಹೇಗೆ ನೆಡಲ್ಪಟ್ಟವು ಎಂಬುದರ ಬಗ್ಗೆ ನಿಖರವಾಗಿ ತಿಳಿದಿಲ್ಲವಾದರೂ, ಅವು ಸುಮಾರು 2000 ವರ್ಷಗಳಷ್ಟು ಹಳೆಯವು ಎಂದು ನಂಬಲಾಗಿದೆ. ಸಸ್ಯಶಾಸ್ತ್ರ ವಿದ್ಯಾರ್ಥಿಗಳು ಕಡ್ಡಾಯವಾಗಿ ಭೇಟಿ ನೀಡಬೇಕಾದ ಸ್ಥಳವಾಗಿದೆ.
ಧಾರ್ಮಿಕ ಸ್ಥಳಗಳು
  • ಸಿದ್ಧೇಶ್ವರ ದೇವಸ್ಥಾನ, ಹಾವೇರಿ:  ಸಿದ್ಧೇಶ್ವರ ದೇವಾಲಯವು ಹಾವೇರಿ ಪಟ್ಟಣದಲ್ಲಿದೆ ಮತ್ತು ಇದನ್ನು 12 ನೇ ಶತಮಾನದ ಪಾಶ್ಚಾತ್ಯ ಚಾಲುಕ್ಯರ ಕಲೆಯ ಅಲಂಕೃತ ಉದಾಹರಣೆಯೆಂದು ಪರಿಗಣಿಸಲಾಗಿದೆ. ದೇವಾಲಯದ ಒಂದು ವಿಶಿಷ್ಟ ಲಕ್ಷಣವೆಂದರೆ ಅದು ಚಾಲುಕ್ಯರ ನಿರ್ಮಾಣಗಳಲ್ಲಿ ಸಾಮಾನ್ಯವಾಗಿರುವ ಪೂರ್ವದಲ್ಲಿ ಉದಯಿಸುತ್ತಿರುವ ಸೂರ್ಯನನ್ನು ಎದುರಿಸುವ ಬದಲು ಪಶ್ಚಿಮಕ್ಕೆ ಮುಖ ಮಾಡಿರುವುದು, ದೇವಾಲಯದಲ್ಲಿನ ಮಂಟಪದಲ್ಲಿ ಉಮಾ ಮಹೇಶ್ವರ(ಶಿವನು ತನ್ನ ಪತ್ನಿ ಉಮಾ ದೇವಿಯೊಂದಿಗೆ), ವಿಷ್ಣು ಮತ್ತು ಪತ್ನಿ ಲಕ್ಷ್ಮಿದೇವಿ, ಸೂರ್ಯ ದೇವ, ನಾಗ-ನಾಗಿಣಿ(ಗಂಡು ಮತ್ತು ಹೆಣ್ಣು ಹಾವಿನ ದೇವತೆ), ಶ್ರೀ ಗಣಪತಿ ಮತ್ತು ಶ್ರೀ ಕಾರ್ತಿಕೇಯ ಶಿಲ್ಪಗಳಿವೆ.
  • ತಾರಕೇಶ್ವರ ದೇವಸ್ಥಾನ: ಈ ದೇವಾಲಯವನ್ನು ತಾರಕೇಶ್ವರನಿಗೆ  (ಶಿವನ ಒಂದು ರೂಪ) ಅರ್ಪಿಸಲಾಗಿದೆ. ಈ ದೇವಾಲಯದ ನಿರ್ಮಾಣವನ್ನು ಕದಂಬರು ಮಾಡಿದ್ದಾರೆ ಎಂದು ನಂಬಲಾಗಿದೆ, ಆದರೆ ಇಂದು ನಾವು ಕಾಣುತ್ತಿರುವ ದೇವಾಲಯದಲ್ಲಿ ಕಲ್ಯಾಣಿ ಚಾಲುಕ್ಯರು ಗಮನಾರ್ಹ ಬದಲಾವಣೆಗಳನ್ನು ಮಾಡಿದ್ದಾರೆ.
  • ಗಳಗೇಶ್ವರ ದೇವಸ್ಥಾನ: ತುಂಗಭದ್ರಾ ನದಿಯ ದಡದಲ್ಲಿರುವ  ಗಳಗೇಶ್ವರ ದೇವಸ್ಥಾನವನ್ನು ಗಳಗನಾಥ ದೇವಸ್ಥಾನ ಎಂದೂ ಕರೆಯುತ್ತಾರೆ ಮತ್ತು ಇದು ಗಳಗನಾಥ ಎಂಬ ಸಣ್ಣ ಹಳ್ಳಿಯಲ್ಲಿದೆ. ಇದನ್ನು ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಇದು ತನ್ನ ಶಿಲ್ಪಗಳು ಮತ್ತು ಸಂಕೀರ್ಣವಾದ ಕೆತ್ತನೆಗಳಿಂದ ನಮ್ಮನ್ನು ಸ್ತಬ್ದಗೊಳಿಸುವ ಶಿವ ದೇವಾಲಯವಾಗಿದೆ. ಈ ದೇವಾಲಯವು ಇತರ ದೇವಾಲಯಗಳಿಗಿಂತ ಬಹಳ ಭಿನ್ನವಾಗಿದೆ ಏಕೆಂದರೆ ಗೋಪುರವು ನೆಲದಿಂದ ಮೇಲೇರುತ್ತಿರುವಂತೆ ತೋರುತ್ತದೆ.
  • ಹಾವೇರಿ: ಜಿಲ್ಲಾ ಕೇಂದ್ರವಾದ ಹಾವೇರಿಯು ಸಿದ್ಧೇಶ್ವರ ದೇವಸ್ಥಾನ, ಉಗ್ರ ನರಸಿಂಹ ದೇವಸ್ಥಾನ, ಸೇಂಟ್ ಆನ್ಸ್ ಚರ್ಚ್ ಮತ್ತು ವೀರಶೈವ ಮಠಗಳ ನೆಲೆಯಾಗಿದೆ.
  • ಕಾಗಿನೆಲೆ: ಕಾಗಿನೆಲೆ ಸಂಗಮೇಶ್ವರ ದೇವಸ್ಥಾನ, ಆಡಮ್ ಶಫಿಯ ದರ್ಗಾ ಮತ್ತು ಆದಿಕೇಶವ ದೇವಸ್ಥಾನ, ಕನಕ ಗುರು ಪೀಠ ಮತ್ತು ಕನಕದಾಸ ಬೃಂದಾವನಕ್ಕೆ ಹೆಸರುವಾಸಿಯಾಗಿದೆ.
  • ನಾಗರೇಶ್ವರ ದೇವಸ್ಥಾನ, ಬಂಕಾಪುರ: ನಾಗರೇಶ್ವರ ದೇವಸ್ಥಾನವು 12 ನೇ ಶತಮಾನದ ಚಾಲುಕ್ಯನ ವಾಸ್ತುಶಿಲ್ಪದ ಅದ್ಭುತವಾಗಿದೆ. ಇದು ಸುಂದರವಾಗಿ ಕೆತ್ತಿದ 60 ಸ್ತಂಭಗಳಿಗೆ ಹೆಸರುವಾಸಿಯಾಗಿದೆ. ನಾಗರೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ.
  • ಚೌಡದಾನಪುರ: ಮುಕ್ತೇಶ್ವರ ದೇವಾಲಯಕ್ಕೆ ಜನಪ್ರಿಯವಾಗಿದೆ.
  • ದೇವರಗುಡ್ಡ: ಮೈಲಾರ ದೇವಸ್ಥಾನಕ್ಕೆ ಜನಪ್ರಿಯವಾಗಿದೆ.
  • ಗುತ್ತಲ: ಸೇಂಟ್ ಜೇಮ್ಸ್ ಚರ್ಚ್‌ಗೆ ನೆಲೆಯಾಗಿದೆ
  • ರಟ್ಟಿಹಳ್ಳಿ: ಕೇದಾರೇಶ್ವರ ದೇವಸ್ಥಾನಕ್ಕೆ ಜನಪ್ರಿಯವಾಗಿದ್ದು, ಕೆಲವು ಕಲ್ಯಾಣ ಚಾಲುಕ್ಯ ಯುಗದ ಸ್ಮಾರಕಗಳನ್ನು ಕಾಣಬಹುದು.
  • ಸಾತೇನಹಳ್ಳಿ: ರಾಣೆಬೆನ್ನೂರಿನಿಂದ 40 ಕಿ.ಮೀ ದೂರದಲ್ಲಿದ್ದು ಜನಪ್ರಿಯ ಶಾಂತೇಶ (ಆಂಜನೇಯ) ದೇವಾಲಯದ ನೆಲೆಯಾಗಿದೆ.
ಪ್ರಕೃತಿ ಮತ್ತು ವನ್ಯಜೀವಿಗಳು
  • ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ: ಈ ಪ್ರದೇಶದ ಅಮೂಲ್ಯವಾದ ಕೃಷ್ಣಮೃಗಗಳನ್ನು ರಕ್ಷಿಸಲು 1974 ರಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಕೃಷ್ಣಮೃಗ ಅಭಯಾರಣ್ಯವನ್ನು ಸ್ಥಾಪಿಸಲಾಯಿತು. ರಾಣೆಬೆನ್ನೂರು ಕೃಷ್ಣಮೃಗ  ಅಭಯಾರಣ್ಯ 119 ಚದರ ಕಿ.ಮೀ ವಿಸ್ತಾರವಾಗಿದೆ, ಇದರಲ್ಲಿ 15 ಚದರ ಕಿ.ಮೀ ಮೂಲ ವಲಯ (ಕೋರ್ ಜೋನ್) ಮತ್ತು 104 ಚದರ ಕಿ.ಮೀ ಹೆಚ್ಚುವರಿ ಪ್ರದೇಶ (ಬಫರ್ ಜೋನ್) ಸೇರಿದೆ. ಪ್ರವಾಸೋದ್ಯಮ ಚಟುವಟಿಕೆಗಳನ್ನು ಹೆಚ್ಚುವರಿ ಪ್ರದೇಶದಲ್ಲಿ ಅನುಮತಿಸಲಾಗಿದೆ.
  • ಬಂಕಾಪುರ ನವಿಲು ಅಭಯಾರಣ್ಯ: ಕರ್ನಾಟಕದ ಎರಡು ನವಿಲು ಅಭಯಾರಣ್ಯಗಳಲ್ಲಿ ಬಂಕಾಪುರ ಕೂಡ ಒಂದು. ಇನ್ನೊಂದು ತುಮಕೂರಿನ ಆದಿಚುಂಚನಗಿರಿ. ನವಿಲು ಭಾರತದ ರಾಷ್ಟ್ರೀಯ ಪಕ್ಷಿ. 139 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಬಂಕಾಪುರ ನವಿಲು ಅಭಯಾರಣ್ಯದಲ್ಲಿ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ನವಿಲುಗಳನ್ನು ವೀಕ್ಷಿಸಲು ಸಾಧ್ಯವಿದೆ. 
ಇತರ ಆಕರ್ಷಣೆಗಳು
  • ಉತ್ಸವ್ ರಾಕ್ ಗಾರ್ಡನ್ : ಹಾವೇರಿಯಲ್ಲಿನ ಉತ್ಸವ್ ರಾಕ್ ಗಾರ್ಡನ್ ಇದನ್ನು ಕಲ್ಪಿಸಿ ವಿನ್ಯಾಸಗೊಳಿಸಿದ ಖ್ಯಾತ ಕಲಾವಿದ ಡಾ.ಟಿ.ಬಿ.ಸೋಲಬಕ್ಕನವರ್ ಅವರ ಕಲ್ಪನೆಯ ಕೂಸಾಗಿದೆ. ಉತ್ಸವ್ ರಾಕ್ ಗಾರ್ಡನ್ ಒಳಾಂಗಣ ಮತ್ತು ಹೊರಾಂಗಣ ವಸ್ತುಸಂಗ್ರಹಾಲಯವನ್ನು ಹೊಂದಿರುವ ವಿಶಿಷ್ಟ ಗ್ಯಾಲರಿಯಾಗಿದ್ದು, ಇದು 8 ವಿಶ್ವ ದಾಖಲೆಗಳನ್ನು ಪಡೆದಿದೆ. ಇದು ಮನೋರಂಜನಾ ಉದ್ಯಾನವನ ಮಾತ್ರವಲ್ಲದೆ ಕಲೆ, ಸಂಸ್ಕೃತಿ ಮತ್ತು ಶಿಕ್ಷಣದ ಕೇಂದ್ರವಾಗಿದೆ. ಇದು ಉತ್ತರ ಕರ್ನಾಟಕದ ಸಮಕಾಲೀನ ಕಲೆ ಮತ್ತು ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಗ್ರಾಮೀಣ ಜೀವನಶೈಲಿ ಮತ್ತು ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ. ಶಿಲ್ಪಗಳು ಗ್ರಾಮೀಣ ಸಂಸ್ಕೃತಿ, ಸಂಪ್ರದಾಯ ಮತ್ತು ಅವರ ಜೀವನಶೈಲಿಯನ್ನು ಚಿತ್ರಿಸುತ್ತದೆ. ಇದು ಸುಮಾರು 2000 ಶಿಲ್ಪಗಳನ್ನು ಹೊಂದಿದೆ. ಹಲವಾರು ಚಲನಚಿತ್ರಗಳಲ್ಲಿ ಅವರ ವಿವಿಧ ಪಾತ್ರಗಳನ್ನು ಪ್ರತಿಬಿಂಬಿಸುವ ಪ್ರಸಿದ್ಧ ಕನ್ನಡ ನಟ ಡಾ.ರಾಜ್‌ಕುಮಾರ್ ಅವರ ಶಿಲ್ಪಗಳ ಜೀವನ ಗಾತ್ರದ ಮಾದರಿಗಳು ಒಂದು ಪ್ರಮುಖ ಅಂಶವಾಗಿದೆ. ರೈತರು ಹೊಲಗಳನ್ನು ಉಳುಮೆ ಮಾಡುವುವುದರೊಂದಿಗೆ ಉತ್ತರ ಕರ್ನಾಟಕದ ಗ್ರಾಮೀಣ ರಂಗಕ್ಕೆ ಹೋಲುವ ಹಳ್ಳಿಯ ಸೆಟ್ಟಿಂಗ್ ಅನ್ನು ಸಹ ನೀವು ಕಾಣಬಹುದು. ಇದಲ್ಲದೆ, ಇದು ವಾಟರ್ ಗೇಮ್ಸ್ ಮತ್ತು ಸಾಹಸ ಆಟಗಳಂತಹ ಇತರ ಮೋಜಿನ ಚಟುವಟಿಕೆಗಳನ್ನು ಸಹ ಹೊಂದಿದೆ.
  • ಬ್ಯಾಡಗಿ ಮೆಣಸಿನಕಾಯಿ: ಬ್ಯಾಡಗಿ ಮೆಣಸಿನಕಾಯಿಗಳು ಮೆಣಸಿನಕಾಯಿಯ ಪ್ರಸಿದ್ಧ ವಿಧವಾಗಿದ್ದು, ಇದನ್ನು ಮುಖ್ಯವಾಗಿ ಹಾವೇರಿ ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಮತ್ತು ಅವುಗಳ ಆಳವಾದ ಕೆಂಪು ಬಣ್ಣಕ್ಕೆ ಹೆಸರುವಾಸಿಯಾಗಿದೆ. ಇದಕ್ಕೆ ಅದೇ ಹೆಸರಿನ ಪಟ್ಟಣದ ಹೆಸರನ್ನು ಇಡಲಾಗಿದೆ. ದೇಶದಲ್ಲಿ ಹೆಚ್ಚಿನ ವಹಿವಾಟು ಹೊಂದಿರುವ ಪ್ರಮುಖ ಮೆಣಸಿನಕಾಯಿ ಪ್ರಭೇದಗಳಲ್ಲಿ ಇವು ಸೇರಿವೆ. ಈ ವೈವಿಧ್ಯಮಯ ಮೆಣಸಿನಕಾಯಿಗಳಿಗೆ ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಅನ್ನು ಸಹ ನೀಡಲಾಗಿದೆ. ಈ ಮೆಣಸಿನಕಾಯಿಗಳ ಬೀಜಗಳಿಂದ ತೆಗೆದ ಎಣ್ಣೆಯನ್ನು ನೇಲ್ ಪಾಲಿಶ್ ಮತ್ತು ಲಿಪ್‌ಸ್ಟಿಕ್‌ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
  • ಬಾಡ: 16 ನೇ ಶತಮಾನದ ಕವಿ, ದಾರ್ಶನಿಕ ಮತ್ತು ಸಂಗೀತಗಾರ ಕನಕ ದಾಸರ ನೆನಪಿಗಾಗಿ ನಿರ್ಮಿಸಲಾದ ಕನಕದಾಸ ಅರಮನೆಗೆ ಹಾವೇರಿ ಜಿಲ್ಲೆಯ ಬಾಡ ಹೆಸರುವಾಸಿಯಾಗಿದೆ.
  • ಶಿಶುನಾಳ: 19 ನೇ ಶತಮಾನದ ಸಾಮಾಜಿಕ ಸುಧಾರಕ, ದಾರ್ಶನಿಕ ಮತ್ತು ಕವಿ ಸಂತ ಶಿಶುನಾಳ ಶರೀಫ ಅವರ ಜನ್ಮಸ್ಥಳವು ಹಾವೇರಿಯ ಶಿಶುನಾಳ ಗ್ರಾಮವಾಗಿದೆ.
  • ಅಬಲೂರು: ಹಾವೇರಿಯಲ್ಲಿರುವ ಅಬಲೂರು ಗೌರವಾನ್ವಿತ ಕನ್ನಡ ಕವಿಯಾದ ಸರ್ವಜ್ಞನ ಜನ್ಮಸ್ಥಳ. ಅಬಲೂರಿನಲ್ಲಿ ನಂದಿ ದೇವಾಲಯವೂ ಇದೆ.
  • ಹೊಳೆ ಆನವೇರಿ: ತುಂಗಭದ್ರಾ ಮತ್ತು ಕುಮುದ್ವತಿ ನದಿಗಳು ಇಲ್ಲಿ ವಿಲೀನಗೊಳ್ಳುತ್ತವೆ. ಶ್ರೀ ರಾಮೇಶ್ವರ ದೇವಸ್ಥಾನ ಮತ್ತು ಶ್ರೀ ಬನಶಂಕರಿ ದೇವಾಲಯಗಳು ಭೇಟಿ ನೀಡಲು ಯೋಗ್ಯವಾಗಿದೆ.
ವನ್ಯಜೀವಿಗಳು
ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ: ಭವ್ಯವಾದ ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯವನ್ನು ಪ್ರಮುಖವಾಗಿ ಕೃಷ್ಣಮೃಗವನ್ನು  ರಕ್ಷಿಸಲು ರಚಿಸಲಾಗಿದೆ. ಇದು ಸುಮಾರು 119 ಚದರ ಕಿ.ಮೀ ವಿಸ್ತೀರ್ಣದಲ್ಲಿದ್ದು, ಇದರ ಮಧ್ಯಭಾಗವು 14.87 ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ ಮತ್ತು 104.13 ಕಿ.ಮೀ ತಾತ್ಕಾಲಿಕ ವಲಯವನ್ನು ಹೊಂದಿದೆ. ಇಲ್ಲಿನ ಸಸ್ಯವರ್ಗವು ಮುಖ್ಯವಾಗಿ ಕುರುಚಲು ಪೊದೆಗಳು ಮತ್ತು ನೀಲಗಿರಿ ತೋಟಗಳನ್ನು ಒಳಗೊಂಡಿದೆ. ಕೃಷ್ಣಮೃಗವನ್ನು ಹೊರತುಪಡಿಸಿ, ಅಭಯಾರಣ್ಯವು ತೋಳ, ವೈಲ್ಡ್ ಪಿಗ್, ಹೈನಾ(ಕಿರುಬ), ನರಿ,  ಗುಳ್ಳೆ ನರಿ, ಲಂಗೂರ್, ಮುಳ್ಳುಹಂದಿ, ಸಾಮಾನ್ಯ ಮುಂಗುಸಿ ಮತ್ತು ಪ್ಯಾಂಗೊಲಿನ್ ಗಳನ್ನು ಸಹ ಹೊಂದಿದೆ. ಅಭಯಾರಣ್ಯವು ಅದರ ಪ್ರಾರಂಭದಿಂದಲೂ ಕೃಷ್ಣಮೃಗಗಳ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆಯನ್ನು ಕಂಡಿದೆ. ಅಳಿವಿನಂಚಿನಲ್ಲಿರುವ ಹಕ್ಕಿ ‘ಗ್ರೇಟ್ ಇಂಡಿಯನ್ ಬಸ್ಟರ್ಡ್’ ನ್ನೂ ಸಹ ಇಲ್ಲಿ ನೋಡಬಹುದು. ಈ ಅಭಯಾರಣ್ಯದ ಇತರ ಹಕ್ಕಿಗಳೆಂದರೆ  ಪೀಫೌಲ್, ಸಿರ್ಕೀರ್ ಕೋಗಿಲೆ, ದೊಡ್ಡ ಗ್ರೇ ಬಾಬ್ಲರ್, ಬೇ ಬ್ಯಾಕ್ಡ್ ಶ್ರೈಕ್, ಬ್ಲ್ಯಾಕ್ ಡ್ರೊಂಗೊ, ಗ್ರೇ ಪಾರ್ಟ್ರಿಡ್ಜ್, ಸ್ಯಾಂಡ್ ಗ್ರೌಸ್ ಮತ್ತು ಅನೇಕವು ಸೇರಿವೆ.
  • ಬಂಕಾಪುರ ನವಿಲು ಅಭಯಾರಣ್ಯ: ಕರ್ನಾಟಕದ ನವಿಲುಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿಗಾಗಿ ಬಂಕಾಪುರ ನವಿಲು ಅಭಯಾರಣ್ಯವು ಎರಡನೇ ಪ್ರಮುಖ ಅಭಯಾರಣ್ಯವಾಗಿದೆ. ಇನ್ನೊಂದು ಆದಿಚುಂಚನಗಿರಿಯಲ್ಲಿರುವುದು. ಇದು ಬಂಕಾಪುರ ಕೋಟೆಯೊಳಗೆ ಇದೆ ಮತ್ತು ಕೋಟೆಯ ಸುತ್ತಲಿನ ಕಂದಕವು ನವಿಲುಗಳಿಗೆ ಸೂಕ್ತವಾದ ವಾಸಸ್ಥಾನವಾಗಿದೆ. ಅಭಯಾರಣ್ಯದಲ್ಲಿ ಸುಮಾರು 1000 ನವಿಲುಗಳಿವೆ ಎಂದು ಅಂದಾಜಿಸಲಾಗಿದೆ. ಇದು ಮರಕುಟಿಗ, ಗೂಬೆಗಳು, ಮ್ಯಾಗ್ಪಿ, ರಾಬಿನ್, ಗ್ರೀನ್ ಬೀ ಈಟರ್, ಪ್ಯಾರಡೈಸ್ ಫ್ಲೈಕ್ಯಾಚರ್, ಸ್ಪಾಟೆಡ್ ಡವ್, ಪ್ಯಾರಕೀಟ್, ಕಿಂಗ್‌ಫಿಶರ್, ಗ್ರೇ ಹಾರ್ನ್‌ಬಿಲ್ ಮುಂತಾದ ಇತರ ಪಕ್ಷಿಗಳನ್ನು ಸಹ ಹೊಂದಿದೆ.
 

Tour Location

ಹಾವೇರಿ ಬೆಂಗಳೂರಿನಿಂದ 340 ಕಿ.ಮೀ. ದೂರದಲ್ಲಿದೆ

ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣ (86 ಕಿ.ಮೀ).
ಹಾವೇರಿಯಲ್ಲಿ ರೈಲ್ವೆ ನಿಲ್ದಾಣವಿದೆ ಮತ್ತು ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಇತ್ಯಾದಿ ನಗರಗಳಿಂದ ಉತ್ತಮ ರೈಲು  ಸಂಪರ್ಕ ಹೊಂದಿದೆ
ಕರ್ನಾಟಕದ ಎಲ್ಲಾ ಭಾಗಗಳಿಂದ ಹಾವೇರಿ ಅತ್ಯುತ್ತಮ ಬಸ್ ಸಂಪರ್ಕವನ್ನು ಹೊಂದಿದೆ
ಸ್ಥಳೀಯ ಪ್ರಯಾಣಕ್ಕೆ ಆಟೊಗಳು ಹೆಚ್ಚು ಸೂಕ್ತವಾಗಿವೆ. ಜಿಲ್ಲೆಯ ವಿವಿಧ ಆಕರ್ಷಣೆಯನ್ನು ತಲುಪಲು ಪ್ರಮುಖ ಪಟ್ಟಣಗಳಾದ ಹಾವೇರಿ, ರಾಣೆಬೆನ್ನೂರು, ಹಿರೆಕೂರು, ಸಾವನೂರು ಮತ್ತು ಬ್ಯಾಡಗಿ ನಗರಗಳಿಂದ ಕಾರು ಬಾಡಿಗೆಗೆ ಪಡೆಯಬಹುದಾಗಿದೆ
 
ಕಡಿಮೆ ಖರ್ಚಿನ ವಸತಿ (ಬಜೆಟ್) ಆಯ್ಕೆಗಳು ಕಡ್ಲಿಸ್ ಹೋಟೆಲ್ ಅಶೋಕ ಹೋಟೆಲ್ ಶಿವ ಶಕ್ತಿ ಅರಮನೆ ಶ್ರೀ ಸಾಯಿ ರೆಸಿಡೆನ್ಸಿ