Karnataka logo

Karnataka Tourism
GO UP
Banner Sri Krishna Temple Udupi

ಮಂಗಳೂರಿನ ಪ್ರಸಿದ್ಧ ದೇವಸ್ಥಾನಗಳು

separator
  /  ಬ್ಲಾಗ್   /  ಮಂಗಳೂರಿನ ಪ್ರಸಿದ್ಧ ದೇವಸ್ಥಾನಗಳು
Famous temples in Mangalore

ಮಂಗಳೂರಿನ ಪ್ರಸಿದ್ಧ ದೇವಸ್ಥಾನಗಳು

ಉಡುಪಿ ಶ್ರೀ ಕೃಷ್ಣ ದೇವಸ್ಥಾನ

ಕಡಲತೀರಗಳು ಮತ್ತು ಕರಾವಳಿ ಆಹಾರಕ್ಕಾಗಿ ಜನಪ್ರಿಯವಾಗಿ ಹೆಸರುವಾಸಿಯಾದ ಮಂಗಳೂರು ಅನೇಕ ಪಾರಂಪರಿಕ ದೇವಾಲಯಗಳಿಗೆ ನೆಲೆಯಾಗಿದೆ. ಕರ್ನಾಟಕದ ಮುಖ್ಯ ಬಂದರು ನಗರವಾದ ಮಂಗಳೂರಿಗೆ ಹಿಂದೂ ದೇವತೆ ಮಂಗಳಾದೇವಿಯ ಹೆಸರನ್ನು ಇಡಲಾಗಿದೆ. ಮಂಗಳೂರಿನಲ್ಲಿ ಮಂಗಳಾ ದೇವಿಯ ದೇವಸ್ಥಾನವಿದ್ದು ಯಾತ್ರಾರ್ಥಿಗಳು ಎಲ್ಲೆಡೆಯಿಂದ ದೇವಸ್ಥಾನಕ್ಕೆ ಬರುತ್ತಾರೆ. ಮಂಗಳೂರು ಅಥವಾ ದಕ್ಷಿಣ ಕನ್ನಡಕ್ಕೆ ಕೇವಲ ಕಡಲತೀರಗಳಿಗೆ ಮಾತ್ರವಲ್ಲದೆ ಇಲ್ಲಿರುವ ಅದ್ಭುತ ದೇವಸ್ಥಾನಗಳಿಗೂ ಸಹ ಪ್ರಯಾಣಿಸಿ. ಇಲ್ಲಿರುವ ದೇವಾಲಯಗಳು ಕೇವಲ ಯಾತ್ರಾರ್ಥಿಗಳನ್ನಷ್ಟೇ ಅಲ್ಲ, ಇದು ಇತಿಹಾಸ, ವಾಸ್ತುಶಿಲ್ಪ ಮತ್ತು ಪರಂಪರೆಯ ಬಗ್ಗೆ ಆಸಕ್ತಿ ಹೊಂದಿರುವ ಪ್ರಯಾಣಿಕರನ್ನೂ ಆಕರ್ಷಿಸುತ್ತದೆ. ಮುರುಡೇಶ್ವರ, ಮಂಜುನಾಥ ದೇವಾಲಯ, ಮೂಕಾಂಬಿಕಾ ದೇವಾಲಯ ಮತ್ತು ಶ್ರೀ ಕೃಷ್ಣ ದೇವಾಲಯಗಳಂತಹ ಪ್ರಸಿದ್ಧ ದೇವಾಲಯಗಳು ಯಾವುದೇ ಪ್ರವಾಸದಲ್ಲಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತವೆ, ಆದಾಗ್ಯೂ, ಭೇಟಿ ನೀಡಲೇಬೇಕಾದ ಇನ್ನೂ ಅನೇಕ ದೇವಾಲಯಗಳಿವೆ.

ಶ್ರೀ ಮಂಗಳಾದೇವಿ ದೇವಸ್ಥಾನ

ಇಲ್ಲಿ ನೆಲೆಸಿರುವ ಮಂಗಳಾದೇವಿಯ ಕಾರಣದಿಂದಾಗಿ ಈ ಸ್ಥಳಕ್ಕೆ ಮಂಗಳಾದೇವಿ ಎಂಬ ಹೆಸರು ಬಂದಿದೆ. ಮಂಗಳಾದೇವಿಯ ನೆಲೆಯಾಗಿರುವ ಈ ದೇವಾಲಯವು ದಕ್ಷಿಣ ಭಾರತೀಯರಲ್ಲಿ ಬಹಳ ಮಹತ್ವದ್ದಾಗಿದೆ. ಅತ್ಯಂತ ಶಕ್ತಿಶಾಲಿ ದೇವಾಲಯವಾಗಿರುವ ಇದು ತನ್ನ ವಾಸ್ತುಶಿಲ್ಪ ಶೈಲಿಯಿಂದ ಜನರನ್ನು ಆಕರ್ಷಿಸುತ್ತದೆ. ಈ ದೇವಾಲಯವನ್ನು 9 ನೇ ಶತಮಾನದಲ್ಲಿ ಮತ್ಸ್ಯೇಂದ್ರನಾಥನ ಆಶ್ರಯದಲ್ಲಿ ಅಲುಪ ರಾಜವಂಶದ ಆಗಿನ ರಾಜ ಕುಂದವರಂ ನಿರ್ಮಿಸಿದನೆಂದು ನಂಬಲಾಗಿದೆ.ಈ ಮಹತ್ವದ ಪುರಾತನ ದೇವಾಲಯವನ್ನು ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಂದಾದ ಪರುಶರಾಮ ನಿರ್ಮಿಸಿದ್ದನು ನಂತರ ಕುಂದವರ್ಮನಿಂದ ವಿಸ್ತರಿಸಲಾಯಿತು ಎಂಬ ನಂಬಿಕೆಯೂ ಇದೆ.

ಗೋಕರ್ಣನಾಥ ದೇವಸ್ಥಾನ, ಕರ್ದೋಳಿ

ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ

ಗೋಕರ್ಣನಾಥಕ್ಕೆ ಸಮರ್ಪಿತವಾಗಿರುವ ಈ ದೇವಾಲಯವನ್ನು 1912 ರಲ್ಲಿ ನಿರ್ಮಿಸಲಾಯಿತು. ಇದು ಆ ಕಾಲದ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ. ಚೋಳ ಗೋಪುರದ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ದಸರಾ ಉತ್ಸವಗಳಿಗೆ ಪ್ರಸಿದ್ಧವಾಗಿದೆ. ನವರಾತ್ರಿಯ ಸಮಯದಲ್ಲಿ ಇಲ್ಲಿ ಎಲ್ಲಾ ನವ ದುರ್ಗೆಯರ ಮೆರವಣಿಗೆಯು ಪ್ರತಿ ವರ್ಷ ನಡೆಯುತ್ತದೆ. ಈ ಆಚರಣೆಯು ಮಂಗಳೂರು ದಸರಾಕ್ಕೆ ಸಮಾನಾರ್ಥಕವಾಗಿದೆ. ಮುಖ್ಯ ದೇವಾಲಯವು ಅನ್ನಪೂರ್ಣೇಶ್ವರಿ, ಸುಬ್ರಹ್ಮಣ್ಯ, ಆನಂದಭೈರವ, ನವಗ್ರಹ, ಮಹಾಗಣಪತಿ ಮತ್ತು ಶನೀಶ್ವರ ದೇವರು ಮತ್ತು ದೇವತೆಗಳ ವಿವಿಧ ಸಣ್ಣ ದೇವಾಲಯಗಳಿಂದ ಆವೃತವಾಗಿದೆ.

ಶ್ರೀ ಮಂಜುನಾಥ ದೇವಸ್ಥಾನ,ಕದ್ರಿ

ದಕ್ಷಿಣ ಭಾರತದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದೆಂದು ನಂಬಲಾದ ಶ್ರೀ ಮಂಜುನಾಥ ದೇವಾಲಯವು 11 ನೇ ಅಥವಾ ಬಹುಶಃ 10 ನೇ ಶತಮಾನದಷ್ಟು ಹಿಂದಿನದಾಗಿದೆ. ಅದ್ಭುತವಾದ ವಾಸ್ತುಶಿಲ್ಪ ಮತ್ತು ಪರಂಪರೆಗೆ ಹೆಸರುವಾಸಿಯಾದ ಈ ದೇವಾಲಯವು 5 ಅಡಿ ಎತ್ತರದ ಲೋಕೇಶ್ವರ ಅಥವಾ ಮಂಜುನಾಥೇಶ್ವರನ ಕಂಚಿನ ವಿಗ್ರಹವನ್ನು ಹೊಂದಿದೆ. ಹಚ್ಚಹಸಿರಿನ ಕದ್ರಿ ಬೆಟ್ಟಗಳ ತಳದಲ್ಲಿ ವಿಶ್ರಮಿಸಿರುವ ಈ ದೇವಾಲಯದ ವಾಸ್ತುಶಿಲ್ಪವು ಪೌರಾಣಿಕ ವಿಜಯನಗರ ಶೈಲಿಯಲ್ಲಿ ಬೌದ್ಧರ ಪ್ರಭಾವವನ್ನು ಹೊಂದಿದೆ. ಈ ದೇವಾಲಯವು ಗಣೇಶ, ದುರ್ಗಾ, ಮಚೇಂದ್ರನಾಥ, ಶೃಂಗಿನಾಥ, ಮಂಜುಶ್ರೀ, ಗೋರಕನಾಥ, ಲೋಕೇಶ್ವರ ಮತ್ತು ಬುದ್ಧರಂತಹ ಇತರ ದೇವರ ದೇವಾಲಯಗಳನ್ನು ಹೊಂದಿದೆ. ಯಾತ್ರಿಕರು ವರ್ಷವಿಡೀ ಈ ದೇವಸ್ಥಾನಕ್ಕೆ ಭೇಟಿ ನೀಡಬಹುದು, ಆದಾಗ್ಯೂ, ಕಾರ್ತಿಕ ಮಾಸ, ಗಣೇಶ ಚತುರ್ಥಿ, ಕದ್ರಿ ಉತ್ಸವ ಮತ್ತು ನವರಾತ್ರಿಯಂತಹ ಹಬ್ಬಗಳಲ್ಲಿ ಇಲ್ಲಿ ಆಚರಣೆ ಮತ್ತು ಉತ್ಸವಗಳು ಬಹು ಸಂಭ್ರಮದಿಂದ ಜರುಗುತ್ತವೆ.

ಸಹಸ್ರ ಕಂಬಗಳ ಜೈನ ಬಸದಿ

1000 ಕಂಬಗಳ ದೇವಸ್ಥಾನ ಮೂಡಬಿದ್ರಿ

ಮಂಗಳೂರಿನಿಂದ ಕೇವಲ 37 ಕಿ.ಮೀ ದೂರದಲ್ಲಿರುವ ಸಾವಿರ ಕಂಬಗಳ ಜೈನ ದೇವಾಲಯವನ್ನು ಕ್ರಿ.ಶ 1430 ರಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಸುಮಾರು 560 ವರ್ಷಗಳಷ್ಟು ಹಳೆಯದು. ಹೆಸರಾಂತ ಜೈನ ಸಂತ ಶ್ರೀ ಚಂದ್ರನಾಥರಿಗೆ ಸಮರ್ಪಿತವಾಗಿರುವ ಈ ದೇವಾಲಯವು ಮೂಡಬಿದ್ರಿಯಲ್ಲಿದೆ ಮತ್ತು ನೀವು ಆಧ್ಯಾತ್ಮಿಕ ಪ್ರವಾಸದಲ್ಲಿರುವಾಗ ಅಥವಾ ಈ ನಗರದಲ್ಲಿ ನೋಡಲೇಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ವಿಜಯನಗರ ಶೈಲಿ ಮತ್ತು ನೇಪಾಳದ ವಾಸ್ತುಶೈಲಿಯ ಮಿಶ್ರಣವಾಗಿರುವ ಈ ದೇವಾಲಯವು ಐತಿಹಾಸಿಕವಾಗಿ ಕೆತ್ತಿದ ಕಂಬಗಳು ಮತ್ತು ಒಳಗಿನ ಗರ್ಭಗುಡಿಯ ಸಭಾಂಗಣದಿಂದ ಸುಂದರವಾಗಿ ಜನರನ್ನು ಆಕರ್ಷಿಸುತ್ತಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ 2.5 ಮೀಟರ್ ಎತ್ತರದ ಚಂದ್ರನಾಥ ಸ್ವಾಮಿಯ ಕಂಚಿನ ವಿಗ್ರಹವಿದೆ. ಕೆತ್ತಿದ 1000 ಕಂಬಗಳು, ಛಾವಣಿಗಳು ಮತ್ತು ಗೋಡೆಗಳನ್ನು ಹೊಂದಿರುವ ಈ ಪುರಾತನ ಪರಂಪರೆಯ ಶ್ರೇಷ್ಠ ಮಾದರಿಯಾಗಿರುವ ಈ ದೇವಾಲಯಕ್ಕೆ ಪ್ರವಾಸಿಗರು ಒಮ್ಮೆ ಭೇಟಿ ನೀಡಲೇಬೇಕು.

ಶ್ರೀ ಶರವು ಮಹಾಗಣಪತಿ ದೇವಸ್ಥಾನ

ಮಂಗಳೂರಿನಲ್ಲಿರುವ ಶರವು ಮಹಾಗಣಪತಿ ದೇವಸ್ಥಾನವು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ, ಶಾಂತ ಮತ್ತು ವಿಶ್ರಾಂತಿ ದೇವಾಲಯಗಳಲ್ಲಿ ಒಂದಾಗಿದ್ದು 800 ವರ್ಷಗಳಷ್ಟು ಹಳೆಯದಾಗಿದೆ . ಇಲ್ಲಿ ಶಿವ ಮತ್ತು ಗಣಪತಿ ದೇವಸ್ಥಾನಗಳಿವೆ. ಈ ದೇವಸ್ಥಾನವು ವರ್ಷವಿಡೀ ಜನಸಂದಣಿಯಿಂದ ಕೂಡಿರುತ್ತದೆ. ಅದರಲ್ಲೂ ಮುಖ್ಯವಾಗಿ ಹಿಂದೂ ಪುರಾಣಗಳ ‘ಶ್ರಾವಣ’ ತಿಂಗಳು ಮತ್ತು ಗಣೇಶ ಚತುರ್ಥಿಯ ಸಮಯದಲ್ಲಿ ಹೆಚ್ಚು ಜನಸಂದಣಿ ಇರುತ್ತದೆ. ಈ ದೇವಾಲಯದ ವಾಸ್ತುಶಿಲ್ಪ ಮತ್ತು ಒಳಾಂಗಣವು ಬಹು ಸುಂದರವಾಗಿದ್ದು ನಿಮ್ಮನ್ನು ವಿಸ್ಮಯಗೊಳಿಸುತ್ತದೆ. ಕದ್ರಿ, ಶರವು, ಕುದ್ರೋಳಿ ಮತ್ತು ಮಂಗಳಾದೇವಿಯಂತಹ ಇತರ ದೇವತೆಗಳ ವಿಗ್ರಹಗಳು ಈ ದೇವಾಲಯದಲ್ಲಿ ನೆಲೆಗೊಂಡಿವೆ.

ತಲುಪುವುದು ಹೇಗೆ?

ಮಂಗಳೂರನ್ನು ವಿಮಾನ, ರಸ್ತೆ ಮತ್ತು ರೈಲು ಸಾರಿಗೆ ಮೂಲಕ ಸುಲಭವಾಗಿ ತಲುಪಬಹುದು. ಈ ನಗರವು ದೇಶದ ಎಲ್ಲಾ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇದೆ.
ವಿಮಾನ ಮೂಲಕ: ಮಂಗಳೂರು ವಿಮಾನ ನಿಲ್ದಾಣವು ಗಲ್ಫ್ ದೇಶಗಳು, ಆಗ್ನೇಯ ಏಷ್ಯಾ ಮತ್ತು ಭಾರತದ ಇತರ ಭಾಗಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ವಿಮಾನ ನಿಲ್ದಾಣವು CBD ಪ್ರದೇಶದಿಂದ ಕೇವಲ 18 ಕಿಮೀ ದೂರದಲ್ಲಿದೆ.
ರೇಲ್ವೆ ಮೂಲಕ: ಮಂಗಳೂರಿನಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ ಹೊಂದಿದೆ.ಇದು ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಚೆನ್ನೈನಂತಹ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.
ಸಲಹೆ: ವಿಸ್ಟಾಡೋಮ್ ಕೋಚ್ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣವನ್ನು ಮಾಡಿ. ಈ ಪ್ರಯಾಣದಲ್ಲಿ ನಿಮಗೆ ಸಿಗುವ ಅನುಭವವೇ ಬೇರೆ. ನೀವು ಖಂಡಿತವಾಗಿಯೂ ಸಂತೋಷವನ್ನು ಅನುಭವಿಸಿರಿ.
ರಸ್ತೆಯ ಮೂಲಕ: ಇಲ್ಲಿ KSRTC ಬಸ್ ಸೇವೆಗಳು ಉತ್ತಮವಾಗಿವೆ ಮತ್ತು ಕರ್ನಾಟಕದ ಪ್ರಮುಖ ನಗರಗಳ ನಡುವೆ ಸಂಚರಿಸುತ್ತವೆ ಮತ್ತು ಬೆಂಗಳೂರು, ಮೈಸೂರು ಇತ್ಯಾದಿ ನಗರಗಳಿಂದ ಉತ್ತಮ ಸಂಪರ್ಕವನ್ನು ಹೊಂದಿವೆ.
ಇಲ್ಲಿ KSRTC ಬಸ್ ಸೇವೆಗಳು ಉತ್ತಮವಾಗಿವೆ ಮತ್ತು ಕರ್ನಾಟಕದ ಪ್ರಮುಖ ನಗರಗಳ ನಡುವೆ ಸಂಚರಿಸುತ್ತವೆ ಮತ್ತು ಬೆಂಗಳೂರು, ಮೈಸೂರು ಇತ್ಯಾದಿ ನಗರಗಳಿಂದ ಉತ್ತಮ ಸಂಪರ್ಕವನ್ನು ಹೊಂದಿವೆ.

ಚಿತ್ರ ಕೃಪೆ : ಮನೋಜ್ ಕುಮಾರ್